ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ ‘ಜಿಗರ್ಥಂಡದ ಕನ್ನಡ ಅವತರಣಿಕೆ ಅದೇ ಹೆಸರಿನಲ್ಲಿ ಚಿತ್ರೀಕರಣ ಪೂರೈಸಿಕೊಂಡಿದೆ. ಯುವನಟ ರಾಹುಲ್ ಹಾಗೂ ಖ್ಯಾತ ಖಳನಟ ರವಿಶಂಕರ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಡಬ್ಬಿಂಗ್ ಬಾಲಾಜಿ ಡಿಜಿ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಈ ಚಿತ್ರವನ್ನು ಏಪ್ರಿಲ್ ತಿಂಗಳಲ್ಲಿ ತೆರೆಗೆ ತರಲು ಚಿತ್ರ ತಂಡ ನಿರ್ಧರಿಸಿದೆ.
ಕಿಚ್ಚ ಕ್ರಿಯೇಷನ್ಸ್ ಮತ್ತು ಎಸ್ ಆರ್ ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಕಿಚ್ಚ ಸುದೀಪ್ ಹಾಗೂ ಟಿ.ಎಸ್.ಸತ್ಯನಾರಾಯಣ, ರಘುನಾಥ್ ಜಿ ಸೇರಿಕೊಂಡು ನಿರ್ಮಾಣ ಮಾಡುತ್ತಿದ್ದು, ಶಿವಗಣೇಶ್ ನಿರ್ದೇಶನ ಮಾಡುತ್ತಿದ್ದಾರೆ. ರಿಯಲ್ ರೌಡಿಯೊಬ್ಬನ್ನು ಹೀರೋ ಮಾಡಲು ಹೋಗುವ ಡಿಫರೆಂಟ್ ಕಥೆ ಹೊಂದಿರುವ ತಮಿಳು ‘ಜಿಗರ್ಥಂಡದಲ್ಲಿ ಸಿದ್ಧಾರ್ಥ ನಟಿಸುತ್ತಿದ್ದ ಪಾತ್ರದಲ್ಲಿ ರಾಹುಲ್ ನಟಿಸುತ್ತಿದ್ದರೆ, ಬೊಬ್ಬಿ ಸಿಂಹ ನಿರ್ವಹಿಸಿದ್ದ ಗ್ಯಾಂಗ್ಸ್ಟರ್ ಪಾತ್ರವನ್ನು ರವಿಶಂಕರ್ ಆವಾಹಿಸಿಕೊಂಡಿದ್ದಾರೆ.
ಈಗಾಗಲೇ ಬೆಂಗಳೂರು, ಧಾರವಾಡ ಸೇರಿದಂತೆ ವಿವಿಧೆಡೆಗಳಲ್ಲಿ ಚಿತ್ರೀಕರಣ ಪೂರೈಸಿರುವ ಈ ಚಿತ್ರಕ್ಕೆ ದಿಲ್ವಾಲಾ ಅನಿಲ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಮಾಂತ್ರಿಕ ಸಂಗೀತ ನೀಡಿದ್ದಾರೆ. ದೇವರಾಜ್ ಎಸ್, ರಮೇಶ್ ಆರ್ಮುಗಂ ಸಂಕಲನ, ಕಲೈ ಅವರ ನೃತ್ಯ ಸಂಯೋಜನೆ, ಶಿವಕುಮಾರ್ ಕಲಾ ನಿದೇರ್ಶನ ಇರುವ ಈ ಚಿತ್ರಕ್ಕೆ ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ.
ಸಂಯುಕ್ತ ಹೊರನಾಡು, ಚಿಕ್ಕಣ್ಣ, ಸಾಧು ಕೋಕಿಲಾ, ದತ್ತಣ್ಣ, ಮಂಜುನಾಥ್ ಹೆಗ್ಡೆ, ಪ್ರಶಾಂತ್, ದಿಲ್ವಾಲಾ ಅನಿಲ್, ಧರ್ಮ ರಾಜೇಶ್ ಪಂಡಿತ್, ಕಿಲ್ಲರ್ ಮಂಜು, ಡ್ಯಾನಿ ಕುಟ್ಟಪ್ಪ, ಮಹೇಶ್ ವೆಂಕಟೇಶ್, ಗಣೇಶ್ ರಾವ್, ಪ್ರದೀಪ್ ಪೂಜಾರಿ, ನಟರಾಜ್ ಬೆಳ್ಳಿದೀಪ, ವಿಶ್ವ, ಅಲೋಕ್ ಆನಂದ್, ವೀಣಾ ಸುಂದರ್, ಚಿತ್ರಾ ಶೆಣೈ, ನಿರ್ಮಲಾ ಸತ್ಯ, ಉಮಾ ಹೆಬ್ಬಾರ್ ಮುಂತಾದವರ ತಾರಾಗಣವಿರುವ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ನಿರ್ಮಾಪಕ ಕೆ.ಮಂಜು, ನಿರ್ದೇಶಕ ಗುರುಪ್ರಸಾದ್ ಹಾಗೂ ನಿರ್ದೇಶಕ ಮಹೇಶ್ ರಾವ್ ಅವರುಗಳು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವದು ಆಕರ್ಷಣೆ ಹುಟ್ಟಿಸಿದೆ.